ನಾಲ್ಕನೆಯ ಸಂಚಿಕೆ..
ನಿತ್ಯ ಬಾವಿಯಲ್ಲಿ ನೀರು ಸೇದಿ ತರಬೇಕಿತ್ತು. ಕಬ್ಬಿಣದ ಬಕೀಟು ಕಾಲಿನ ಹಿಮ್ಮಡಿಗೆ ತಾಕಿ ಮೃದುವಾಗಿದ್ದ ನನ್ನ ಕಾಲಿನ ಚರ್ಮ ಕಿತ್ತು ರಕ್ತ ಬರಲು ಪ್ರಾರಂಭವಾಯಿತು. ಇದರ ಮಧ್ಯೆ ನಿತ್ಯ ಯಜಮಾನನ ದರ್ಪದ ಮಾತು, ನೀರು ತರಲು ತಡ ಮಾಡ್ತೀಯಾ ಎಂದು ಇಡೀ ರಾತ್ರಿ ಮನೆಯ ಒಳಗೆ ಬಿಡದೆ ಹೊರಗೆ ನಿಲ್ಲಿಸಿ ಕೊಡುವ ಕಠಿಣ ಶಿಕ್ಷೆ ಎಲ್ಲವು ಕಣ್ಮುಂದೆ ಇದೆ.
ಇನ್ನು ಬಾವಿಗೆ ಹಾಕಿದ ಬಿಂದಿಗೆ ಪೂರ್ತಿ ತುಂಬಿ ಒಳಗೆ ಬಿತ್ತು. ನಾನು ಚಿಕ್ಕವನು ಹಗ್ಗ ಜೋರಾಗಿ ಎಳೆಯಲು ಹೋಗಿ ಕೆಳಗೆ ಬಿದ್ದ ಘಟನೆ ನನಗೀಗಲು ಕಣ್ಣಿಗೆ ಕಟ್ಟಿದ ಆಗಿದೆ.
ಅಂಗಡಿ ಬಾಗಿಲು ತೆಗೆಯಲು ಹರ ಸಾಹಸ ಪಡಬೇಕಿತ್ತು. ಅದು ಈಗಿನ ರೀತಿ ಬಾಗಿಲಲ್ಲ ಮೇಲೆಳೆದು ತೆಗೆಯಬೇಕಿತ್ತು. ಅದು ಹಳೆಯ ಬಾಗಿಲು ಬೇರೆ ಕೆಟ್ಟು ಹೋಗಿತ್ತು.ಅದೆಷ್ಟೆ ಕಷ್ಟವಾದರು ತೆಗೆದು ಕಾಯಿ ಚೂರು ತುಂಬಿದ್ದ ಮಂಕರಿ ಹೊರಗಿಟ್ಟು ವ್ಯಾಪಾರಕ್ಕೆ ಕೂರಬೇಕಿತ್ತು ಒಪ್ಪತ್ತಿನ ಊಟ ಸಿಗಲು.
ಇನ್ನು ಹೇಳಿದ ಕೆಲಸ ಸರಿಯಾಗಿ ಮಾಡಿಲ್ಲವೆಂದು ಮಳೆ ಬರುವಾಗ ಹೊರಗೆ ನಿಲ್ಲಿಸೋವ್ರು.ನನ್ನ ಕಾಲು ನೀರಲ್ಲಿ ಹೆಚ್ಚು ಇದ್ದು ಚರ್ಮ ಸೆಳೆದು ಬಿಡೋದು.
ಮನೆಗೆ ಹೋದಾಗ ನಮ್ಮ ಅಮ್ಮ ಔಷಧಿ ಹಚ್ಚುತ್ತಿದ್ರು.
ಇಷ್ಟೆಲ್ಲ ಹಿಂಸೆ ನಾನು ಹದಿನೈದು ವರ್ಷ ತಡೆದುಕೊಂಡೆ.
ಅಲ್ಲಿಂದ ಆಚೆ ಬಂದು ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಲು ಶುರು ಮಾಡಿದೆ.ಆಗ ಮತ್ತೊಂದು ರೀತಿಯ ಸಂಕಷ್ಟ ಯಜಮಾನ ತರಕಾರಿಯಲ್ಲಿ ಬಂದ ಹಣವನ್ನು ಕಿತ್ತುಕೊಳ್ಳೋವ್ರು. ಅದು ಯಾವ ರೀತಿ ಅಂದ್ರೆ ದುಡ್ಡು ಕೊಡ್ತೀನಿ ಬೇಕಿತ್ತು ಅಂತ ತಗೊಂಡವ್ರು ಕೊಡ್ತಾ ಇರಲಿಲ್ಲ.ನಾನು ಕೇಳೋಕೆ ಹೋಗಿ ಅವರಿಂದ ಹೊಡೆಸಿಕೊಂಡಿದ್ದೀನಿ.ಕೆಲವೊಂದು ಬಾರಿ ತಲೆಗೆ ಹೊಡೆದಾಗ ಕಣ್ಣು ಮಂಜು ಆಗೋದು.ಆಗ ನನ್ನ ವಯಸ್ಸು ಒಂಬತ್ತು.
ಆಮೇಲೆ ನಾನು ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಕೆಲಸ ಕಲಿತೆ.
ಆ ನಂತರ ನಾನು ಅದರಲ್ಲಿ ಏನಾದರು ಸಾಧಿಸಬೇಕೆಂದು ಹಠಕ್ಕೆ ಬಿದ್ದೆ.. ಬಟ್ಟೆ ಹೊಲೆಯುವುದರಲ್ಲಿ ಪ್ರತಿಯೊಂದು ಕಲಿತೆ.ಎಷ್ಟರ ಮಟ್ಟಿಗೆ ನಾನು ತಯಾರಾದೆ ಎಂದರೆ.. ಬಟ್ಟೆ ಇದೆ ರೀತಿ ಹೊಲಿಗೆ ಕೂರಬೇಕು ಎನ್ನುವಷ್ಟರ ಮಟ್ಟಿಗೆ.ಆ ಮೇಲೆ ನಾನು ಬೇರೆಯವರಿಗೆ ಕೆಲಸ ಕೊಡುವಷ್ಟರ ಮಟ್ಟಿಗೆ ಬೆಳೆದೆ.
ನನ್ನ ಮನಸ್ಸು ಅಷ್ಟಕ್ಕೆ ಸುಮ್ಮನಾಗದೆ ನಾನು ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರ ಸಾಕಷ್ಟು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಲು ಹೊರಟೆ…
ಮುಂದುವರಿಯುವುದು..